ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡು ಕಾರ್ಯಾಚರಿಸುತ್ತಿರುವ ಕರಾವಳಿ ಲೇಖಕಿ -ವಾಚಕಿಯರ ಸಂಘದ ಮುರ್ತುಜಾ ಬೇಗಂ, ಸುಖಲಾಕ್ಷಿ ಸುವರ್ಣ ಹಾಗೂ ಕ್ಯಾಥರಿನ್ ರಾಡ್ರಿಗಸ್ ರಿಗೆ 2025-26ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಡಾ। ಸುನೀತಾ ಶೆಟ್ಟಿ ಮುಂಬಯಿ ಪ್ರಾಯೋಜಿಸುವ ‘ತೌಳವ ಸಿರಿ’ ಪ್ರಶಸ್ತಿಗೆ ತುಳು ಮತ್ತು ಕನ್ನಡ ಭಾಷೆಯ ಹಿರಿಯ ಲೇಖಕಿ ಕ್ಯಾಥರಿನ್ ರಾಡ್ರಿಗಸ್ ಆಯ್ಕೆಯಾಗಿದ್ದಾರೆ.
ಕರಾವಳಿಯ ಮೊದಲ ತಲೆಮಾರಿನ ಲೇಖಕಿ ಚಂದ್ರಭಾಗಿ ರೈ ಅವರ ಹೆಸರಿನ ದತ್ತಿನಿಧಿ ಪುಸ್ತಕ ಬಹುಮಾನಕ್ಕೆ ಬಾಗಲಕೋಟೆಯ ಮುರ್ತುಜಾ ಬೇಗಂ ಅವರ ‘ಹಣತೆ ಹಚ್ಚಿ ಬಿಡಿ ಹೆಜ್ಜೆ ಹೆಜ್ಜೆಗೂ’ ಕೃತಿ ಬಹುಮಾನ ಪಡೆದಿದೆ. ಡಾ| ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿಗೆ ಲೇಖಕಿ, ಸಂಘಟಕಿ ಸುಖಲಾಕ್ಷಿ ವೈ. ಸುವರ್ಣ ಅವರ ‘ಮುಂಬಯಿ ಮತ್ತು ಮಹಿಳೆ’ ಸಂಶೋಧನಾತ್ಮಕ ಕೃತಿ ಆಯ್ಕೆಯಾಗಿದೆ.
ಫೆ. 7ರಂದು ಅಪಾರಹ್ನ 2.30ಕ್ಕೆ ಉರ್ವಸ್ಟೋರ್ನಲ್ಲಿರುವ ಸಂಘದ ಸಭಾಂಗಣ ‘ಸಾಹಿತ್ಯ ಸದನ’ದಲ್ಲಿ ನಡೆಯುವ ಸಮಾರಂಭದಲ್ಲಿ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವ ಡಾ| ಎ. ಸುಬ್ಬಣ್ಣ ರೈ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.



