ವಿರಾಜಪೇಟೆ: “ಒಂದು ಪತ್ರಿಕೆಯು ತನ್ನ ಒಳಗಿನ ಗುಣಮಟ್ಟದ ಹೂರಣದಿಂದ ಮಾತ್ರ ಸಮಾಜಕ್ಕೆ ಅಗಾಧವಾದ ಸತ್ವವನ್ನು ನೀಡಲು ಸಾಧ್ಯ. ಕಳೆದ 25 ವರ್ಷಗಳಿಂದ ‘ಅನುಪಮ’ ಪತ್ರಿಕೆಯು ಹೆಣ್ಣುಮಕ್ಕಳ ಸೂಕ್ಷ್ಮ ಸಂವೇದನೆಗಳಿಗೆ ರೆಕ್ಕೆ ಕಟ್ಟಿ, ಸಮಾಜದಲ್ಲಿ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಮಹತ್ತರ ಕಾರ್ಯ ಮಾಡುತ್ತಿದೆ” ಎಂದು ಅರಮೇರಿ ಶ್ರೀ ಕಳಂಚೇರಿ ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಬ್ರೈಟ್ ಪಬ್ಲಿಕ್ ಸ್ಕೂಲ್ನಲ್ಲಿ ದಿನಾಂಕ 11-02-2026ರ ಬುಧವಾರದಂದು ಜರುಗಿದ ‘ಅನುಪಮ’ ಮಹಿಳಾ ಮಾಸಿಕದ ಬೆಳ್ಳಿಹಬ್ಬದ ಸಂಭ್ರಮ ಮತ್ತು ಓದುಗರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಅವರು, “ಸಮಾಜವನ್ನು ಮುನ್ನಡೆಸುವ ಅಪ್ರತಿಮ ಶಕ್ತಿ ತಾಯಂದಿರಿಗಿದೆ; ಈ ಮಣ್ಣಿನ ತಾಯಂದಿರು ಸಾತ್ವಿಕವಾದ ಆಲೋಚನೆ ಮತ್ತು ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮೃದ್ಧವಾದ ಸಮಾಜ ನಿರ್ಮಾಣ ಸಾಧ್ಯ” ಎಂದು ತಿಳಿಸಿದರು.
“ಇಂದಿನ ರೀಲ್ಸ್ ಹಾಗೂ ಇಂಟರ್ನೆಟ್ ಲೋಕದಲ್ಲಿ ಮನೋವಿಕಾರಗಳೇ ಹೆಚ್ಚಾಗುತ್ತಿದ್ದು, ಇವುಗಳ ನಡುವೆ ಮಕ್ಕಳ ಮಾನಸಿಕತೆಯನ್ನು ಅರಿತು ಓದುಗರಲ್ಲಿ ಸಾತ್ವಿಕ ಭಾವನೆ ಮೂಡಿಸುವ ಕೆಲಸಕ್ಕೆ ನಿರಂತರ ಅಧ್ಯಯನಶೀಲತೆ ಅಗತ್ಯ” ಎಂದು ಸ್ವಾಮೀಜಿಯವರು ಮಾರ್ಗದರ್ಶನ ನೀಡಿದರು. “ಬದುಕಿನಲ್ಲಿ ‘ಕೇವಲ ಹಣ ಗಳಿಕೆಯೊಂದೇ ಮುಖ್ಯವಲ್ಲ, ಉತ್ತಮ ಆಲೋಚನೆಗಳು ಮುಖ್ಯ’ ಎಂಬ ಸಂದೇಶವನ್ನು ನೀಡುತ್ತಿರುವ ಅನುಪಮ ಪತ್ರಿಕೆಯು ಕೇವಲ ಓದಿನ ವಸ್ತುವಾಗದೆ ಪ್ರತಿಯೊಬ್ಬರ ಜೀವನದ ಹೃದಯದಲ್ಲಿ ಸ್ಥಾನ ಪಡೆಯಬೇಕು” ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕಿ ಹೆಚ್.ಜಿ. ಸಾವಿತ್ರಿ ಅವರು ಮಾತನಾಡಿ, “ಒಂದು ಮಹಿಳಾ ಪತ್ರಿಕೆಯನ್ನು ಯಾವುದೇ ಅಡೆತಡೆಗಳಿಗೆ ಬಗ್ಗದೆ ಇಷ್ಟು ವರ್ಷಗಳ ಕಾಲ ನಿರಂತರವಾಗಿ ನಡೆಸುವುದು ಒಂದು ಸಂಕಲ್ಪದ ಸುದೀರ್ಘ ಪಯಣ” ಎಂದು ಶ್ಲಾಘಿಸಿದರು.
ವಕೀಲರಾದ ಸಿಂಧೂರ ಎನ್. ಸ್ವಾಮಿ ಅವರು ಮಾತನಾಡಿ, “ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಪತ್ರಿಕೆಯಲ್ಲಿ ‘ಕಾನೂನು ಅರಿವು’ ಮೂಡಿಸುವ ಲೇಖನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಇದು ಶೋಷಣೆ ಮುಕ್ತ ಬದುಕಿಗೆ ದಾರಿಯಾಗಬೇಕು” ಎಂದು ಸಲಹೆ ನೀಡಿದರು.
ಪತ್ರಿಕೆಯ ಪ್ರಧಾನ ಸಂಪಾದಕಿ ಶಹನಾಝ್ ಎಂ. ಅವರು ಅಧ್ಯಕ್ಷೀಯ ಭಾಷಣ ಮಾಡುತ್ತಾ, ಅನುಪಮ ಪತ್ರಿಕೆಯು ಕಳೆದ 25 ವರ್ಷಗಳಿಂದ ನಡೆದು ಬಂದ ಸುದೀರ್ಘ ಹಾದಿಯನ್ನು ಸ್ಮರಿಸಿದರು. “ಒಂದು ಪತ್ರಿಕೆಗೆ ಓದುಗರೇ ನಿಜವಾದ ಬಂಡವಾಳ, ನಿಮ್ಮ ಬೆಂಬಲವೇ ನಮ್ಮ ಯಶಸ್ಸು” ಎಂದು ಅವರು ಕೃತಜ್ಞತೆ ಸಲ್ಲಿಸಿದರು.
ವಿಶೇಷವಾಗಿ ನಾಲ್ವರು ಓದುಗರಾದ ಶ್ರೀಮತಿ ಜಯಶ್ರೀ ಶ್ರೀಮತಿ ಪುಷ್ಪ, ಶಿವರಾಂ ಮತ್ತು ಗುಲ್ನಾರ್ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು
ಕಾರ್ಯಕ್ರಮವು ರಹಮತ್ ಟಿ.ಪಿ. ಅವರ ಕುರಾನ್ ಪಠಣದೊಂದಿಗೆ ಆರಂಭವಾಯಿತು. ನಂತರ ಮುಹೀನಾ ಮುಹಮ್ಮದ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಸಮಾರಂಭದ ವೇದಿಕೆಯಲ್ಲಿ ಲೇಖಕಿ ಸಾಜಿದಾ ಮೂಮಿನ್ ಉಪಸ್ಥಿತರಿದ್ದರು. ಪತ್ರಿಕೆಯ ಉಪಸಂಪಾದಕಿ ಸಮೀನಾ ಯು. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮೀರಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು, ಅಬ್ದುಲ್ ರಹಮಾನ್ ಅವರು ಧನ್ಯವಾದ ಸಮರ್ಪಿಸಿದರು.



